ಸಾಹಿತ್ಯ ಲೋಕ

ಯಕ್ಷಗಾನ ರಂಗದ ಮೇರು ಕಲಾವಿದ, ಕಲಾತಪಸ್ವಿ ಸೂರಿಕುಮೇರು ಗೋವಿಂದ ಭಟ್ ಅಸ್ತಂಗತ

ಬಂಟ್ವಾಳ: ಯಕ್ಷಗಾನ ಲೋಕದ ಅಪ್ರತಿಮ ಕಲಾತಪಸ್ವಿ, ತೆಂಕುತಿಟ್ಟು ಶೈಲಿಯ ಹಿರಿಯ ವಿದ್ವಾಂಸ ಮತ್ತು ಕಳೆದ ಐದು ದಶಕಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಆಧಾರಸ್ತಂಭವಾಗಿದ್ದ ಸುರಿಕುಮೇರು ಕೆ. ಗೋವಿಂದ ಭಟ್ (85) ಅವರು ವಿಧಿವಶರಾಗಿದ್ದಾರೆ.

ಏಳು ದಶಕಗಳ ಕಾಲ ರಂಗಸ್ಥಳವನ್ನೇ ಉಸಿರಾಗಿಸಿಕೊಂಡಿದ್ದ ಅದ್ವಿತೀಯ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ . ಯಕ್ಷಗಾನದ ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು ನಿಸ್ಸೀಮರು.

1940, ಮಾರ್ಚ್ 22ರಂದು ಬಂಟ್ವಾಳದ ಕೋಡಪದವಿನ ಕಡು ಬಡತನದಲ್ಲಿ ಜನಿಸಿದ ಗೋವಿಂದರ ಬಾಲ್ಯ ಕಣ್ಣೀರಿನ ಕತೆಯಾಗಿತ್ತು. ಕಳೆದ 50 ವರ್ಷಗಳಿಗೂ ಹೆಚ್ಚು ಕಾಲ ಧರ್ಮಸ್ಥಳ ಮೇಳದಲ್ಲಿ ಸೇವೆ ಸಲ್ಲಿಸಿದ್ದರು. ಇಳಿ ವಯಸ್ಸಿನಲ್ಲೂ ರಂಗಭೂಮಿಯ ಮೇಲಿನ ಮೋಹ ಬಿಟ್ಟವರಲ್ಲ. ದೃಷ್ಟಿ ಮಂಜಾಗುತ್ತಿದ್ದರೂ “ರಂಗಸ್ಥಳ ಬಿಟ್ಟು ನನಗೇನು ಗತಿ?” ಎನ್ನುವ ಅವರ ಕಲಾ ಪ್ರೇಮ ಯುವ ಕಲಾವಿದರಿಗೆ ಸದಾ ಸ್ಫೂರ್ತಿ.

ನೀವು ವೇಷ ಹಾಕದಿದ್ದರೂ ಪರವಾಗಿಲ್ಲ, ನಮ್ಮ ಮೇಳದ ಚೌಕಿಯಲ್ಲಿ ನೀವಿದ್ದರೆ ಸಾಕು” ಎಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೀಡಿದ್ದ ಗೌರವ ಅವರ ಘನತೆಗೆ ಸಾಕ್ಷಿಯಾಗಿದೆ.

ರಂಗಸ್ಥಳದ ಮೇಲೆ ಕೌರವ, ಕರ್ಣನಂತಹ ಗಂಭೀರ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಅವರ ಅಭಿನಯ ಮತ್ತು ಮಾತುಗಾರಿಕೆ ಅನನ್ಯವಾಗಿತ್ತು. ಯಕ್ಷಗಾನದ ಹೆಜ್ಜೆಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಅವರು ಹೊಸ ಮನ್ವಂತರವನ್ನೇ ಸೃಷ್ಟಿಸಿದ್ದರು. ಅವರ ನಿಧನದಿಂದ ಯಕ್ಷಗಾನ ರಂಗದ ಒಂದು ಸುವರ್ಣ ಯುಗವೇ ಅಂತ್ಯಗೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಲಾಭಿಮಾನಿಗಳು ಮತ್ತು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್ ಬಿಡಿ

Join Us