ತೆಂಕು-ಬಡಗು ಮೇಳಗಳ ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದರಾದ ಶ್ರೀ ಮುಖ್ಯಪ್ರಾಣ ಕಿನ್ನಿಗೋಳಿ ವಿಧಿವಶ
ಕಿನ್ನಿಗೋಳಿ: ತೆಂಕು-ಬಡಗು ಮೇಳಗಳಲ್ಲಿ ಕಲಾ ವ್ಯವಸಾಯ ಮಾಡಿದ ಅನುಭವಿ ವಿದೂಷಕ ಮುಖ್ಯಪ್ರಾಣ ಕಿನ್ನಿಗೋಳಿ(,84) ಯವರು ಶನಿವಾರ ಅಲ್ಪ ಕಾಲದ ಅನಾರೋಗ್ಯ ದಿಂದ 8 ಗಂಟೆಗೆ ನಿಧನ ಹೊಂದಿದ್ದಾರೆ. ಅವರು ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ಕಿನ್ನಿಗೋಳಿಯ ಸಮೀಪದ ಶಿಮಂತೂರು ಉದಯಗಿರಿಯ ನಿವಾಸಿ ಯಾಗಿದ್ದು . ಯಕ್ಷಗಾನ ಪರಿಸರದಲ್ಲಿಯೇ ಬೆಳೆದ ಇವರು ಬಾಲ್ಯದಲ್ಲಿಯೇ ಕಲಾಸಕ್ತಿ ಹೊಂದಿದ್ದರು.
ಕಿನ್ನಿಗೋಳಿಯ ಗೋಳಿಜೋರದ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘದಲ್ಲಿ ಹವ್ಯಾಸಿ ವೇಷಧಾರಿಯಾಗಿ ತೊಡಗಿಕೊಂಡರು. ಯಕ್ಷಗಾನ ಕಲಾಧ್ಯಯನವನ್ನು ಗುರು ಮುಖೇನ ಕಲಿತ ಇವರಿಗೆ ಕವಿ ವಿದ್ವಾಂಸ, ಶಿಮಂತೂರು ನಾರಾಯಣ ಶೆಟ್ಟಿ ಗುರುಗಳು. ಮಿಜಾರು ಅಣ್ಣಪ್ಪ ಅವರಿಂದಲೂ ಮಾರ್ಗದರ್ಶನ ಪಡೆದ ಮುಖ್ಯಪ್ರಾಣ ಅವರು ಉಭಯ ತಿಟ್ಟುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಸೀತಾರಾಮ ಶೆಟ್ಟಿಗಾರ್, ಸೂರಪ್ಪ ಶೆಟ್ಟಿಗಾರ್ ಅವರುಗಳಿಂದ ಅರ್ಥಗಾರಿಕೆ ಹಾಗೂ ನಾಟ್ಯಾಭ್ಯಾಸ ಮಾಡಿದ ಇವರು ಬ್ರಹ್ಮಾವರ ರಾಮನಾಯಿರಿ ಅವರಿಂದ ಬಡಗು ತಿಟ್ಟಿನ ನಾಟ್ಯವನ್ನು ಅಭ್ಯಾಸ ಮಾಡಿದರು. ತೆಂಕು ಹಾಗೂ ಬಡಗು ಎರಡೂ ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಪ್ರಧಾನ ಕಲಾವಿದರಾಗಿ ಐವತ್ತೈದು ವರ್ಷಗಳಿಂದ ಸೇವೆ ಸಲ್ಲಿಸಿದ್ದ ಕಿನ್ನಿಗೋಳಿ ಮುಖ್ಯಪ್ರಾಣ ಶೆಟ್ಟಿಗಾರ್ ಅವರು ಓದಿದ್ದು ಐದನೆಯ ತರಗತಿಯವರೆಗೆ ಮಾತ್ರ. ತೆಂಕು ತಿಟ್ಟಿನ ಹೆಸರಾಂತ ಹಾಸ್ಯಗಾರ ಮಿಜಾರು ಅಣ್ಣಪ್ಪನವರ ಮಾರ್ಗದರ್ಶನದಲ್ಲಿ ಪಾತ್ರಾಭಿನಯ ಪಡೆದುಕೊಂಡ ಮುಖ್ಯಪ್ರಾಣ ಕಿನ್ನಿಗೋಳಿ ಅವರು ಮೊದಲಿಗೆ ಕಲಾವಿದರಾಗಿ ಕಟೀಲು ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ , ಯಕ್ಷಗಾನ ಮೇಳದಲ್ಲಿ ಸೇವೆ ಆರಂಭಿಸಿದರು. ನಂತರ ಇರಾ ಸೋಮನಾಥೇಶ್ವರ, ಸಾಲಿಗ್ರಾಮ, ಕದ್ರಿ ಮೇಳಗಳಲ್ಲಿ ಪಾತ್ರ ನಿರ್ವಹಣೆ ಮಾಡಿದ ಕಿನ್ನಿಗೋಳಿ ಅವರು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.ಕಟೀಲು, ಇರಾ ಸೋಮನಾಥೇಶ್ವರ, ಸುಬ್ರಹ್ಮಣ್ಯ, ಮಂತ್ರಾಲಯ ಮೇಳ, ಸಾಲಿಗ್ರಾಮ, ಪೆರ್ಡೂರು, ಕುಮಟ, ಕದ್ರಿ, ಮಂದಾರ್ತಿ.ಕಟೀಲು ಮೇಳಗಳಲ್ಲಿ 56 ವರ್ಷಗಳ ತಿರುಗಾಟ ನಡೆಸಿದ್ದಾರೆ.
ರಂಗ ಸನ್ನಿವೇಶವನ್ನು ಸಾಕ್ಷಾತ್ಕರಿಸಿ ಪಾತ್ರಕ್ಕೆ ಒಪ್ಪುವ ಉತ್ತಮ ನಾಟ್ಯ ಹಾಗೂ ಅಭಿನಯವನ್ನು ಮಾಡಿ ಪಾತ್ರ ಪೋಷಣೆ ನೀಡುವ ಇವರು ಪೌರಾಣಿಕ ಮತ್ತು ಕಾಲ್ಪನಿಕ ಪ್ರಸಂಗಗಳೆರಡರಲ್ಲೂ ಉತ್ತಮವಾಗಿ ಪಾತ್ರ ನಿರ್ವಹಿಸಿ ಪ್ರಸಿದ್ಧರಾಗಿದ್ದಾರೆ.ಚೆಲುವೆ ಚಿತ್ರಾವತಿಯ ಅಡುಗೂಲಜ್ಜಿ, ಶೂದ್ರ ತಪಸ್ವಿನಿಯ ರಂಗಾಚಾರಿ, ಕಾಂಚನಶ್ರೀಯ ಪ್ರೇತ, ಸ್ವಪ್ನ ಸಾಮ್ರಾಜ್ಯದ ಶೂರಸೇನ, ಕಲಿ ಕ್ರೋಧನದ ಮಡಿವಾಳ ಮೊದಲಾದ ವೇಷಗಳು ಮುಖ್ಯಪ್ರಾಣರಿಗೆ ಖ್ಯಾತಿ ತಂದುಕೊಟ್ಟ ಪಾತ್ರಗಳು.
ಶ್ರೀಕೃಷ್ಣ ಲೀಲೆಯ ನಾರದ, ವಿಜಯ, ರಜಕ, ಭೀಷ್ಮ ವಿಜಯದ ವೃದ್ಧ ಬ್ರಾಹ್ಮಣ, ಭೀಷೋತ್ಪತ್ತಿಯ ಕಂದರ, ಪಟ್ಟಾಭಿಷೇಕದ ಮಂಥರೆ, ಶೂರ್ಪನಖಾ ವಿವಾಹದ ವಿದ್ಯುಜ್ಜಿಹ, ಶನೀಶ್ವರ ಮಹಾತ್ಮಯ ಶನಿಪೀಡಿತ ರಾಜಾ ವಿಕ್ರಮ ಮೊದಲಾದ ಪೌರಾಣಿಕ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿ ಪ್ರಸಿದ್ಧರಾದರು.ದಮಯಂತಿ ಪುನಃ ಸ್ವಯಂವರದ ಬಾಹುಕ, ದೇವಿ ಮಹಾತ್ಮಿಯಲ್ಲಿ ಚಾರಕ ಮತ್ತು ಸುಗ್ರೀವ ಮೊದಲಾದ ಪಾತ್ರಗಳಲ್ಲಿಯೂ ಖ್ಯಾತಿ ಗಳಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಯು ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಕಿನ್ನಿಗೋಳಿ ಸಮೀಪದ ಗೊಲಿಜೋರ ದ ಉದಕ ಗಿರಿಯ ಅವರ ಸ್ವಗೃಹದಲ್ಲಿ ನಡೆಯಲಿದೆ.
ಯಕ್ಷಗಾನ ಇಲ್ಲದ ಸಂದರ್ಭದಲ್ಲಿ ಮನೆಯಲ್ಲೇ ಕೈಮಗ್ಗದಲ್ಲಿ ದುಡಿಯುತ್ತಿದ್ದರು. ಯಕ್ಷಗಾನ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ದ.ಕ ಜಿಲ್ಲಾ ಸಾಹಿತ್ಯ ಪರಿಷತ್ತು ರಾಜ್ಯೋತ್ಸವ ಪ್ರಶಸ್ತಿ, ದ.ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಉಡುಪಿ ಕಲಾರಂಗದ ನಿಟ್ಟೂರು ಸುಂದರ ಶೆಟ್ಟಿ ಪ್ರಶಸ್ತಿ, ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ, ಕೋಡಿಮನೆ ವಾಸುಭಟ್ಟ ಪುರಸ್ಕಾರ ಸೇರಿದಂತೆ ನೂರಾರು ಸಂಮಾನ, ಗೌರವಗಳು ಸಂದಿದ್ದವು.
ಕಾಮೆಂಟ್ ಬಿಡಿ