ಜಿಲ್ಲಾ ಸುದ್ದಿಗಳು

ಸರ್ಕಾರಕ್ಕೆ ಬದ್ದತೆ ಇಲ್ಲದ ಹೊರತು ಯಾವ ಅಧಿಕಾರಿ ಬದಲಾದರೂ ಇಲ್ಲಿ ಏನೂ ಬದಲಾಗದು.

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ನಗರ ಪೊಲೀಸ್ ಕಮಿಷನರ್ ಇಬ್ಬರ ವರ್ಗಾವಣೆಯಾಗಿದೆ. ಕೋಮುದ್ವೇಷದ ಹಿಂಸೆ, ಕೊಲೆಗಳನ್ನು ತಡೆಯಲು ಆಗದೆ ಕೈಚೆಲ್ಲಿ ಕೂತರು ಎಂಬ ಕಾರಣಕ್ಕೆ ಈ ವರ್ಗಾವಣೆಗ್ಳು ನಡೆದಿವೆ. ಹೊಸದಾಗಿ ಜಿಲ್ಲೆಗೆ ಎಸ್‌ಪಿ ಆಗಿ ಡಾ. ಅರುಣ್ ಕೆ ಮತ್ತು ನಗರ ಪೊಲೀಸ್ ಕಮೀಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಬಂದಿದ್ದಾರೆ. ಇಬ್ಬರು ದಕ್ಷ ಅಧಿಕಾರಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೊಂದು ಒಳ್ಳೆಯ ಬೆಳವಣಿಗೆ ನಿಜ. ಆದರೆ ಹಿಂದೂತ್ವವಾದಿಗಳು ಹೊತ್ತಿಸಿರುವ ಕೋಮುದ್ವೇಷದ ಬೆಂಕಿಯಿಂದ ಜರ್ಜರಿತವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಇಷ್ಟು ಸಾಕೆ? 

ಕರಾವಳಿಯಲ್ಲಿ ಕೋಮುದ್ವೇಷವನ್ನು ಹರಡುತ್ತಿರುವವರು ಯಾರು ಎಂಬುದು ಸರ್ಕಾರಕ್ಕೆ ಗೊತ್ತಿದೆ. ಮತೀಯ ಹಿಂಸಾಚಾರಕ್ಕೆ ಪ್ರೇರಣೆ ನೀಡುತ್ತಿರುವವರು ಯಾರು, ಅಮಾಯಕರ ಕೊಲೆಗಳನ್ನು ನಡೆಸಲು ಪ್ರಚೋದನೆ ನೀಡುತ್ತಿರುವವರು ಯಾರು ಎಂಬುದು ಸಹ ಸರ್ಕಾರಕ್ಕೆ ಗೊತ್ತಿದೆ. ಕೆಲವರು ತೆರೆಯ ಮೇಲಿದ್ದಾರೆ. ಇನ್ನು ಕೆಲವರು ತೆರೆಯ ಹಿಂದೆ ಇದ್ದಾರೆ. ಎಲ್ಲವೂ ಸರ್ಕಾರಕ್ಕೆ ಗೊತ್ತಿದೆ. ಇಂತಹ ಎಲ್ಲ ಜನವಿರೋಧಿ, ಕೋಮುವಾದಿ ಶಕ್ರಿಗಳನ್ನು ಮಟ್ಟ ಹಾಕಲೇಬೆಕೆಂಬ ಛಲ ಸರ್ಕಾರಕ್ಕೆ ಇದ್ದರೆ, ಕರಾವಳಿಯನ್ನು ಸಹಬಾಳ್ವೆಯ ನೆಲವಾಗಿ ರೂಪಿಸುತ್ತೇವೆ ಎಂಬ ಬದ್ದತೆ ಸರ್ಕಾರಕ್ಕೆ ನಿಜಕ್ಕೂ ಇದ್ದರೆ ಯಾವ ಬುರ್ನಾಸು ಪೊಲೀಸ್ ಅಧಿಕಾರಿ ಇದ್ದರೂ ಆತನನ್ನು ಸಮರ್ಥವಾಗಿ ದುಡಿಸಿಕೊಂಡು ಆ ಕೆಲಸ ಮಾಡಲು ಸರ್ಕಾರಕ್ಕೆ ಸಾಧ್ಯವಿದೆ. ಸರ್ಕಾರಕ್ಕೆ ಆ ಬದ್ದತೆ ಇಲ್ಲ ಎಂದಾದರೆ ಯಾವ ಸಮರ್ಥ ಅಧಿಕಾರಿ ಬಂದರೂ ಆತ ಹೆಚ್ಚಿನದನೇನನ್ನೂ ಮಾಡಲಾರ. 

ತಳಹಂತದ ಅನೇಕ ಪೊಲೀಸ್ ಅಧಿಕಾರಿಗಳು ಕರಾವಳಿಯಲ್ಲಿ ಬಿಜೆಪಿಯ ಅನಧಿಕೃತ ಕಾಲಾಳುಗಳು. ಪೊಲೀಸ್ ವ್ಯವಸ್ಥೆಯನ್ನು ಹೇಗೆ ತನ್ನ ಪರವಾಗಿ ಬಗ್ಗಿಸಬೇಕೆಂಬುದು ಇಲ್ಲಿನ ಬಿಜೆಪಿ ಶಾಸಕರಿಗೆ, ಮುಖಂಡರಿಗೆ ಗೊತ್ತು. ಆದರೆ ಸರ್ಕಾರಕ್ಕೆ, ಇಲ್ಲಿನ ಕಾಂಗ್ರೆಸ್ ನಾಯಕರಿಗೆ ಪೊಲೀಸ್ ವ್ಯವಸ್ಥೆಯನ್ನು ಕರಾವಳಿಯ ಒಳಿತಿಗೆ ಹೇಗೆ ದುಡಿಸಿಕೊಳ್ಳಬೇಕು ಎಂಬ ಕಲ್ಪನೆಯೂ ಇಲ್ಲ. 

ಕರಾವಳಿಯ ಮತೀಯಹಿಂಸೆಗೆ, ಮುಸ್ಲಿಂ ದ್ವೇಷಕ್ಕೆ ಬೆಂಬಲ ಸೂಚಿಸಿ ಮೌನ ವಹಿಸುವ, ಮೇಲ್ನೋಟಕ್ಕೆ ತಾವು ಯಾವ ಪಕ್ಷದವರೂ ಅಲ್ಲ ಎಂಬತೆ ಪೋಸು ಕೊಡುತ್ತಾ ಅವಕಾಶ ಸಿಕ್ಕಾಗಲೆಲ್ಲ ಕೋಮುದ್ವೇಷಕ್ಕೆ ಹಿನ್ನೆಲೆಯಿಂದಲೇ ತುಪ್ಪಸುರಿಯುವ ಕರಾವಳಿಯ ಘಟಾನುಘಟಿಗಳ ಜೊತೆ ಕರ್ನಾಟಕದ ಕಾಂಗ್ರೆಸ್‌ನ ಬಹುತೇಕ ಸಚಿವರು  ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಕೋಮುವಾದವನ್ನು ನಿಗ್ರಹಿಸಲು ಹೊರಟರೆ ಅವರಿಗೆಲ್ಲ ಬೇಸರ ಆಗುತ್ತದೆ ಎಂಬುದು ಕಾಂಗ್ರೆಸ್ ಸಚಿವರ ಧೋರಣೆ. ಇಂಥವರಿಂದ ಏನನ್ನು ನಿರೀಕ್ಷಲು ಸಾಧ್ಯ? 

ಈ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಜಿಲ್ಲೆಗೆ ಬಂದಾಗ ಅಂತಹ ಘಟಾನುಘಟಿಗಳ ಜೊತೆಗೆಲ್ಲ ಹೇಗೆ ನಡೆದುಕೊಂಡಿದ್ದಾರೆಂದು ನಾವು ನೋಡಿಲ್ಲವೆ? ಎಲ್ಲರ ಮೆಚ್ಚಿನ  ಯು.ಟಿ.ಖಾದರ್ ಅಣ್ಣ ಬಿಜೆಪಿಗರಿಗೂ, ಕಲ್ಲಡ್ಕರಿಗೂ ಅಷ್ಟೇ ಮೆಚ್ಚಿನವರಲ್ಲವೆ?  ಜಿಲ್ಲೆಯಲ್ಲಿರುವ ಇತರ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯರಿಗೆ ಯಾವ ಬದ್ದತೆ ಇದೆ? ಪುತ್ತೂರಿನ ಕಾಂಗ್ರೆಸ್ ಶಾಸಕ ಬಿಜೆಪಿಯ ಕೊಡುಗೆ. ಅವರಿಗೆ ಕಂಬಳ, ಕೋಳಿಪಡೆ ಸಂಘಟಿಸುವುದು ಬಿಟ್ಟರೆ ಇಲ್ಲಿ ಭೀತಿಯಿಂದ ಬದುಕುತ್ತಿರುವ ಅಮಾಯಕರ ಬಗ್ಗೆ ಯಾವ ಕಾಳಜಿ ಇದೆ? 

ಈಗ ಬಂದಿರುವ ಹೊಸ ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡಿ ಇಲ್ಲಿನ ಸ್ಥಿತಿಯನ್ನು ಹತೋಟಿಗೆ ತಂದು ಶಾಂತಿ ಸಹಬಾಳ್ವೆ ನೆಲೆಸಲು ಶ್ರಮಿಸಬೇಕಾದರೆ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಬದ್ದತೆಯಿಂದ ಕೆಲಸ ಮಾಡಬೇಕು. ಇಲ್ಲವಾದರೆ ಯಾವ ಸಿಂಗಂ ಬಂದರೂ ಇಲಿನ ಸ್ಥಿತಿ ಬದಲಾಗದು.  
ವರದಿ-ಶಶಿಧರ ಹೆಮ್ಮಾಡಿ 
 

ಕಾಮೆಂಟ್ ಬಿಡಿ

Join Us