ಜಿಲ್ಲಾ ಸುದ್ದಿಗಳು

ಮಂಗಳೂರು ಜಲವೃತ್ತಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕಾರಣವೇ

ಮಂಗಳೂರು: ಮಂಗಳೂರಿನ ಸ್ಟೇಟ್ ಬ್ಯಾಂಕ್ ವೃತ್ತದಿಂದಾರಂಭಿಸಿ ನಗರದ ಅನೇಕ ಕಡೆಗಳಲ್ಲಿ ಮಳೆಗಾಲದ ಕೃತಕ ನೆರೆ ಸೃಷ್ಠಿಯಾಗುವುದೇ ಭಾರೀ ದೊಡ್ಡ ಸುದ್ದಿಯಾಗುತ್ತದೆ. ಆ ಸುದ್ಧಿಯು ವಿಜೃಂಭಿಸಲ್ಪಡುತ್ತದೆ.  ನಗರದ ಕೆಲವೊಂದು ವಾರ್ಡಿನಲ್ಲಿ ಉಕ್ಕಿಬಂದ ನೀರಿನ ನೆರೆಯ ಫೊಟೋ ಪೇಪರಲ್ಲಿ,ಟೀವಿನಲ್ಲಿ ಬಂದಿದೆ ಎಂದು ಮಾಧ್ಯಮದವರು ನಾಗರಿಕರನ್ನು ಖುಷಿಪಡಿಸುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಇತರ ಕೆಲವು ಮಾಧ್ಯಮಗಳಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನೇ ಹೊಣೆಗಾರನನ್ನಾಗಿ ಮಾಡಿ ಟ್ರೋಲ್ ಮಾಡಲಾಗುತ್ತದೆ. ಅದರಲ್ಲೂ ಪಂಪ್ ವೆಲ್ ಪ್ರದೇಶವೊಂದನ್ನೇ ಗುರಿಯಾಗಿಸಿಕೊಂಡು ಟೀಕೆ,ವ್ಯಂಗ್ಯ ಮಾಡಲಾಗುತ್ತದೆ.

ಪಂಪ್ ವೆಲ್ ಮೇಲ್ಸೇತುವೆಯನ್ನು ಸಂಪೂರ್ಣವಾಗಿ ಕಿತ್ತು  ಮೊದಲಿದ್ದ ಹಾಗೆನೆ ಮಾಡಿದರೆ ಪಂಪ್ ವೆಲ್ ಬಳಿಯಲ್ಲಿ ಮಳೆಯ ನೀರು ಉಕ್ಕಿ ಹರಿಯುವುದಿಲ್ಲವೇ? ಕೃತಕ ನೆರೆಯನ್ನು ಕಾಣುವುದಕ್ಕೆ ಸಾಧ್ಯವಿಲ್ಲವೇ? ಅದೇ ಪ್ರಕಾರ ಮಂಗಳೂರು ನಗರದ ಇತರ ಭಾಗದಲ್ಲಿಯೂ ಮಳೆಯ ನೀರು ದೂರಕ್ಕೆ ಹರಿಯಲಾಗದೆ ಏರಿಕೊಂಡು ಮನೆ ಮಂದಿರದ ಒಳಗೆ ನುಗ್ಗುತ್ತದೆ. ಸಂಚಾರಕ್ಕೆ ನಿಷೇಧವಾಗುತ್ತದೆ. ಮಂಗಳೂರಿನಂತಹ ಪ್ರಾಕೃತಿಕ ಕೊಡುಗೆಯ ಅತಿಸುಂದರ ಊರೊಂದನ್ನು ಮನಸೋಇಚ್ಚೆ ಕೊಚ್ಚಿಹಾಕಿ ವಿರೂಪ ಮಾಡುತ್ತ ಬಂದಾಗಲೇ ಈಗಿನ ನೆರೆಪೀಡನೆ ಕಟ್ಟಿಟ್ಟ ಬುತ್ತಿಯಾಗತೊಡಗಿತ್ತು.

 ನಗರದ ಸುತ್ತಲಿದ್ದ ರಾಜಕಾಲುವೆ( ಅಗಲವಾದ ತೋಡು) ಮತ್ತು ಕಿರಿದಾದ ತೋಡುಗಳು ಎಲ್ಲವೂ ಮಣ್ಣುಮುಕ್ಕಿದೆ. ನಗರದ ಪ್ರಧಾನ ರಾಜಕಾಲುವೆಯನ್ನು ಸಮತಟ್ಟು ಮಾಡಿ ಕೋಟಿ ರೂಪಾಯಿಗಳ ಆದಾಯ ಬರುವ ವಾಣಿಜ್ಯ ಕಟ್ಟಡಗಳನ್ನು ಅತ್ಯಂತ ಪ್ರಭಾವಿಗಳು ನಿರ್ಮಿಸಿದಾಗಲೇ ಮಂಗಳೂರಿಗೆ ಬೀಳುವ ಮಳೆಯ ನೀರಿಗೆ ಉಸಿರುಗಟ್ಟಲು ಶುರುವಾಗಿದ್ದು. ಆ ಕಟ್ಟಡಗಳನ್ನು ನಾಳೆಯೇ ಸಮತಟ್ಟು ಮಾಡಿ ಹಿಂದಿನ ನಕಾಶೆಯ ಪ್ರಕಾರ ಕಾಲುವೆ ಪುನರ್ನಿಮಾಣವಾದಲ್ಲಿ ನೆರೆ ಇರಲಿ,ರಸ್ತೆ ಮೇಲೆ ಒಂದು ಹನಿ ಕಂಡರೂ ಅದ್ಭತವೆನಿಸಲಿದೆ.

ಮಂಗಳೂರಿನ ಎಲ್ಲ ಹಿಲ್ ಗಳೂ ಕೂಡ ಲೆವೆಲ್ ಆಗಿದೆ. ಕೃಷಿ ಭೂಮಿ,ಸರಕಾರಿ ಗುಡ್ಡೆ,ಪರಂಬೋಕು ಎಲ್ಲವೂ ಪರಿವರ್ತನೆಗೊಂಡು ಮೂಲಸ್ವರೂಪವನ್ನೇ ಬದಲಾಯಿಸಿಕೊಂಡಿದೆ. ಕಟ್ಟಡ ಮತ್ತು ರಸ್ತೆ ನಿರ್ಮಾಣ ಮಾಡುವಾಗ ಮಾಡಿರುವ ಕೃತಕ ತೋಡು ಅಲ್ಲಿ ಇಲ್ಲಿ ಕಾಣಸಿಗುವುದಾದರೂ ಅದು ಮಂಗಳೂರಿನ ಭೂಮಿಯ ನೀರನ್ನು ಒಯ್ಯುವುದಕ್ಕೆ ಸಾಧ್ಯವಾಗುವುದಿಲ್ಲ. ಅದು ಮಂಗಳೂರಿನ ಭೂಮಟ್ಟಕ್ಕೆ ಹೊಂದಿಕೊಂಡ ಕಾಲುವೆಯಾಗಿರುವುದಿಲ್ಲ, ನಿಸರ್ಗದತ್ತವಾದ ಕಾಲುವೆಯಲ್ಲಿ ಹರಿಯುವ ನೀರು ಸುಮಾರು ಎಕರೆ ಜಾಗದಿಂದ ಕೂಡಿಬಂದಿರುವುದಾಗಿರುತ್ತದೆ. ಭೂಮಿಯ ಸಹಜ ಏರುತಗ್ಗುಗಳಿಗನುಸಾರವಾಗಿ ಆ ಕಾಲುವೆ ತನ್ನಿಂತಾನೇ ರಚನೆಯಾಗಿರುತ್ತದೆ. ಸಮುದ್ರ ಕಿನಾರೆಯಲ್ಲಿರುವ ಭೂಪ್ರದೇಶದಲ್ಲಿ, ಭೂಮಿ ಸಮತಟ್ಟು ಮಾಡುವಾಗ,ಕಟ್ಟಡ ನಿರ್ಮಾಣ ಮಾಡುವಾಗ ರಾಜಕಾಲುವೆ,ಕಿರುಗಾಲುವೆಗಳ ತಳಮಟ್ಟವನ್ನು ಹಾಳುಮಾಡದೆ ಅದು ಹೇಗೆ ಇದೆಯೋ ಹಾಗೇ ಇರಲಿ ಎನ್ನುವಂತೆ ನಗರ ನಿರ್ಮಾಣ ಮತ್ತು ವಿಸ್ತರಣೆ ಮಾಡಬೇಕು ಹೊರತು ಸಮುದ್ರವನ್ನು ಹೊರತುಪಡಿಸಿ ಮಿಕ್ಕೆಲ್ಲ ಜಾಗವನ್ನೂ ಕಬಳಿಸಿದ್ದರ ಪರಿಣಾಮವಾಗಿ ಇವತ್ತು ಮಂಗಳೂರಿನಲ್ಲಿ ಕೃತಕ ನೆರೆ ತುಂಬುವುದಕ್ಕೆ ಕಾರಣವಾಗಿದೆ.

ನಳಿನ್ ಕುಮಾರ್ ಕಟೀಲ್ ಅವರು ಸಂಸದನಾದ ನಂತರವೇ ದ. ಕ. ಜಿಲ್ಲೆಯೊಳಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿದ್ದೇ ಹೆಚ್ಚು ಎಂದರೆ ಅದು ಹೊಗಳಿಕೆಯಾಗದು. ಬಂಟವಾಳ ಬಿಸಿರೋಡಿನಲ್ಲಿ ಹೆದ್ದಾರೆಯ ತುಂಡು ಕಾಮಗಾರಿ ಅರೆಜೀವದಲ್ಲಿ ಸಾಗುತ್ತಿದ್ದುದು ಹೊರತಾದರೆ ಬೇರೆಲ್ಲಿಗೆ ಅನುದಾನ ಮಂಜೂರಾಗಿತ್ತು? ಸಧ್ಯಕ್ಕೆ ದ. ಕ. ಜಿಲ್ಲೆಯೊಳಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಬಾಕಿ ಉಳಿದಂತಿಲ್ಲ. ಇನ್ನು  ಬಾಕಿ ರಸ್ತೆಗಳು ಮೇಲ್ದರ್ಜೆಗೇರಬೇಕಷ್ಚೆ.ಮುಖ್ಯ ವಿಚಾರವೇನೆಂದರೆ ನಮಗೆ ಎಲ್ಲ ಸವಲತ್ತುಗಳು ಬೇಕು ಎನ್ನುತ್ತೇವೆ. ಹೊರದೇಶದ ಚಿತ್ರ ,ವೀಡಿಯೋ ಹಂಚಿಕೊಂಡು ಹೋಲಿಸುತ್ತೇವೆ. ಆದರೆ ನಮಗೆ ಬೇಕಾಗುವ ಸವಲತ್ತನ್ನು ಪಡೆಯುವುದಕ್ಕಾಗಿ ನಾವೇನು ತ್ಯಾಗ ಮಾಡುತ್ತಿದ್ಗೇವೆ? ಅಥವಾ ಅದಕ್ಕೆ ಪೂರಕವಾಗಿ ಎಷ್ಟರ ಮಟ್ಚಿಗೆ ಸ್ಪಂದಿಸುತ್ತೇವೆ? ಸಹಕರಿಸುತ್ತೇವೆ? ಹೆದ್ದಾರಿ ನಿರ್ಮಾಣವಾಗವಾಗ  ಭೂಮಿ ಸ್ವಾಧೀನ ಪ್ರಕ್ರಿಯೆ ಎಷ್ಟು ಜಟಿಲವಾಗಿರುವುದಿಲ್ಲ?ಅದಕ್ಕೆ ವಿರೋಧವಾಗಿ ನ್ಯಾಯಾಲಯದ ಮೆಟ್ಚಲೇರುವ ಪ್ರಕರಣಗಳೆಷ್ಟಿಲ್ಲ? ತಮ್ಮದನ್ನು ಉಳಿಸಿ ಬೇರಯವರದನ್ನು ಅಳಿಸಿ ಎಂದು ರಾಜಕೀಯ ಪ್ರಭಾವ ಬಳಸಿ ಹೆದ್ದಾರಿಯ ಸ್ವರೂಪವನ್ನೇ ಬದಲಾಯಿಸುವ ಪ್ರಕರಣಗಳೆಷ್ಟಿಲ್ಲ?

ಮಂಗಳೂರಿನ ನಂತೂರು ಜಂಕ್ಷನ್ ನಿಂದ ಮೂಡುಬಿದಿರೆ ಕಾರ್ಕಳಕ್ಕೆ ಹೋಗುವ  ಸಂಖ್ಯೆ169 ಹೆದ್ದಾರಿ ರಚನೆಗೆ ಈಗಲೂ ದಿನಕ್ಕೊಂದು ತಡೆಯಾಜ್ಞೆಗಳು  ಬರುತ್ತಲೇ ಉಂಟು. ಆ ಹೆದ್ದಾರಿ ಕಾಮಗಾರಿ ಯಾವತ್ತೋ ಮುಗಿಯುವುದನ್ನು ನಾಗರಿಕರ  ಕಿರುಕುಳಗಳಿಂದಾಗಿ ಕಾಮಗಾರಿ ಕೆಲಸ ನೀರು ಕುಡಿಯುತ್ತಿರಬೇಕಾಗಿದೆ.

ಒಬ್ಬ ಜನಪ್ರತಿನಿಧಿ ಮಾಡಬೇಕಾದ ಅಗತ್ಯ ಕೆಲಸವನ್ನು ಮಾಡುವುದೇ ಮುಖ್ಯ. ಮುಂದಿನ ಎಲ್ಲದರಲ್ಲೂ ಅದಕ್ಕೆ ಸಂಬಂಧಿತ ಇಲಾಖೆಯಿರುತ್ತದೆ.ಅದರ ಜೊತೆಗೆ ನಾಗರಿಕರೂ ಕೂಡಾ ಧನಾತ್ಮಕ ಬೆಂಬಲ ಕೊಡಬೇಕಾಗುತ್ತದೆ. ರಸ್ತೆ ನಿರ್ಮಾಣದ ನಿಧಾನಕ್ರಿಯೆಯನ್ನು ಜೋರಾಗಿ ಟೀಕಿಸುವವರ ಸಾಲಿನಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದವರೂ ಹೆಚ್ಚಿನವರು ಇದ್ದಾರೆ ಎಂಬುದೂ ಗಮನಾರ್ಹ !ಸರಿಯಾದ ಪರಿಹಾರ ಮೊತ್ತವನ್ನು ಕಡ್ಡಾಯವಾಗಿ ಸ್ವೀಕರಿಸುವ  ಒಪ್ಪಂದವಾಗಬೇಕು ಅದಾದ ನಂತರ ಭೂ ಸ್ವಾಧೀನ ಆಗಲೇಬೇಕು ಎನ್ನುವ ನ್ಯಾಯವನ್ನು ನ್ಯಾಯಾಲಯವು ಯಾಕೆ ನೀಡಬಾರದು? ಅದನ್ನೇ  ನ್ಯಾಯಾಲಯದ ಎಲ್ಲಾ ವಿಭಾಗೀಯ ಪೀಠದಲ್ಲಿ ಪರಿಶೀಲಿಸುವುದು ,ತೀರ್ಪು ಕೊಡುವುದು. ಕೊನೇಗೆ ಸುಪ್ರೀಮ್ ಕೋರ್ಟ್ ತನಕವೂ ಮನವಿ ಮಾಡುವುದು. ಅದರಿಂದಾಗಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳುವುದೂ ಇಲ್ಲ, ನ್ಯಾಯವಾದ ರೂಪ ಕೂಡಾ ದೊರೆಯುವುದಿಲ್ಲ. ಮಂಗಳೂರು ಪರಿಪೂರ್ಣವಾದ ಅಭಿವೃದ್ಧಿ ಕಾಣಬೇಕಾದರೆ ರಾಜಕಾಲುವೆ,ಕಿರುಗಾಲುವೆಗಳನ್ನು ಪತ್ತೆ ಹಚ್ಚಿ ಮುಕ್ಕಿಸಿದ್ದ ಮಣ್ಣು ತೆಗೆಯಲೇಬೇಕು. ಮಂಗಳೂರಿನ ನಾಗರಿಕರು ಅಲ್ಲಿನ ಶಾಸಕರೆಲ್ಲರನ್ನು,ಸಂಸದ ಬೃಜೇಶ್ ಚೌಟರನ್ನು ಒಟ್ಟುಗೂಡಿಸಿ ಕಾಲುವೆಗಳ ಪುನರ್ರಚನೆಯ ಬಗ್ಯೆ ವಿಚಾರ ವಿನಿಮಯ ಮಾಡಬೇಕು. ಪಕ್ಷಾತೀತವಾದ ಚರ್ಚೆ ,ತೀರ್ಮಾನ ಆಗಬೇಕು. ಮಾಜಿ ಸಂಸದನನ್ನೇ ಟೀಕಿಸುವ ದುರುದ್ದೇಶವೇ ಮುಂದುವರಿಯುವುದಾದರೆ ನಿವಾಸಿಗಳು ನಿರ್ಗಮಿಸುವುದಕ್ಕೆ ಮಂಗಳೂರು ಮುಂದೆ ಅರಬ್ಬೀ ಸಮುದ್ರ ಪಾಲಾಗುವ ತನಕ ಕಾಯಬೇಕು.

-ವಿ. ಕೆ. ವಾಲ್ಪಾಡಿ

ಕಾಮೆಂಟ್ ಬಿಡಿ

Join Us