ಜಿಲ್ಲಾ ಸುದ್ದಿಗಳು

ಕರಾವಳಿ ಜನರ ಬಹುದಿನಗಳ ಕನಸು ನನಸು: ಬೆಂಗಳೂರು-ಮಂಗಳೂರು ಸಂಚಾರ ಸುಲಭ

ಬೆಂಗಳೂರು: ಕರ್ನಾಟಕ ಕರಾವಳಿ ಭಾಗಕ್ಕೆ ಬೆಂಗಳೂರಿನಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಂಚಾರದ ಕನಸು ನನಸಾಗುತ್ತಿದೆ. ವರ್ಷದಿಂದಲೂ ಘೋಷಣೆ ಹಂತದಲ್ಲಿದ್ದ ಪ್ರಸ್ತುತ ರೈಲಿಗೆ ಇತ್ತೀಚೆಗೆ ಅನುಮೋದನೆ ನೀಡಿದ ಬೆನ್ನಲ್ಲೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿರುವ ರೈಲ್ವೆ ಇಲಾಖೆಯು ಇದೇ ಜೂನ್ 3ರಿಂದ ಪ್ರಾಯೋಗಿಕ ಸಂಚಾರ ಆರಂಭಿಸಲಿದೆ. ಪ್ರಮುಖ ರೈಲ್ವೆ ತಪಾಸಣೆಗಳು, ಪರೀಕ್ಷೆಗಳು ಈ ವೇಳೆ ನಡೆಯಲಿವೆ.

ದಕ್ಷಿಣ ಕರ್ನಾಟಕದ ಭಾಗದಿಂದ ಕರಾವಳಿ ಕರ್ನಾಟಕದ ಭಾಗಕ್ಕೆ ವೇಗದ ರೈಲು ಸಾರಿಗೆ ಸಿಕ್ಕಂತಾಗಲಿದೆ. ಇದು ಪ್ರಯಾಣಿಕರಿಗೆ, ವ್ಯಾಪಾರ, ವಾಣಿಜ್ಯಕ್ಕೆ ಪೂರಕವಾಗುವ ಜೊತೆಗೆ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. ಒಟ್ಟು 8 ಬೋಗಿಗಳ ರೈಲು ಬುಧವಾರ (ಜೂನ್ 3) ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಯಶವಂತಪುರ ನಿಲ್ದಾಣದಿಂದ ಹೊರಡಲಿದೆ. ಒಟ್ಟು 8 ಗಂಟೆ 40ನಿಮಿಷಗಳು ಕ್ರಮಿಸಿ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ತಾತ್ಕಾಲಿಕ ವೇಳಾಪಟ್ಟಿಯಲ್ಲಿ ತಿಳಿಸಿದ್ದಾರೆ.


ಪ್ರಾಯೋಗಿಕ ಸಂಚಾರದಲ್ಲಿ ಪ್ರಮುಖ ಅಂಶಗಳ ಪರಿಗಣನೆ

 ಪ್ರಾಯೋಗಿಕ ಸಂಚಾರ ವೇಳೆ ರೈಲ್ವೆ ತಜ್ಞರು, ಹಿರಿಯ ಅಧಿಕಾರಿಗಳು, ತಾಂತ್ರಿಕ ನಿಪುಣರು ಇರಲಿದ್ದಾರೆ. ಇತ್ತೀಚೆಗೆ ರೈಲ್ವೆ ಡಬಲಿಂಗ್ ಕಾರ್ಯ ಹಾಗೂ ಸುಬ್ರಹ್ಮಣ್ಯ ರಸ್ತೆಯ ದುರ್ಗಮ ಪ್ರದೇಶದಲ್ಲಿ ವಿದ್ಯುದೀಕರಣವು ಯಶಸ್ವಿಯಾಗಿದೆ. ಇದರ ಬೆನ್ನಲ್ಲೆ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಘೋಷಣೆ ಆಗಿದೆ. ಬುಧವಾರ ರೈಲಿನ ವೇಗ, ವೇಗ ನಿಯಂತ್ರಣ, ರೈಇನ ಸಾಮರ್ಥ್ಯ, ಸುರಂಗ ಮತ್ತು ಘಾಟಿ ಮಾರ್ಗದಲ್ಲಿ ರೈಲಿನ ಕಾರ್ಯಕ್ಷಮತೆ, ಸಿಗ್ನಲಿಂಗ್ ಸೇರಿದಂತೆ ಅನೇಕ ತಪಾಸಣೆಗಳು ನಡೆಯಲಿವೆ. ವಂದೇ ಭಾರತ್ ರೈಲು ವೇಗದ ರೈಲಾಗಿದ್ದು, ಸುಮಾರು 100 ಕಿಲೋ ವೇಗದಲ್ಲಿ ಸಾಗಲಿದೆ. ಘಾಟಿ ಪ್ರದೇಶದಲ್ಲಿ ರೈಲಿನ ವೇಗ ತಗ್ಗಲಿದೆ. ವಾಣಿಜ್ಯ ಕಾರ್ಯಾಚರಣೆ ಆರಂಭಿಸಲು ಇರುವ ಎಲ್ಲ ಮಾನದಂಡಗಳನ್ನು ಪ್ರಾಯೋಗಿಕ ಸಂಚಾರದ ವೇಳೆ ಪರಿಗಣಿಸಲಾಗುತ್ತದೆ. ಶೀಘ್ರವೇ ರೈಲಿನ ವಾಣಿಜ್ಯ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ರೈಲು ಮಾರ್ಗ, ನಿಲುಗಡೆ ವಿವರ 

ಬೆಂಗಳೂರಿನಿಂದ ಹೊರಟು ನೇರ ಹಾಸನವನ್ನು ಬೆಳಗ್ಗೆ 9 ಗಂಟೆಗೆ ತಲುಪುತ್ತದೆ. 10 ನಿಮಿಷ ಬಳಿಕ ಅಲ್ಲಿಂದ ಹೊರಟು 9.55 ಗಂಟೆಗೆ ಸಕಲೇಶಪುರ ಮುಟ್ಟಲಿದೆ. ಮಧ್ಯಾಹ್ನ 12.30ಕ್ಕೆ ಸುಬ್ರಹ್ಮಣ್ಯ ರಸ್ತೆ, 2ಗಂಟೆಗೆ ಪಡೀಲ್ ನಂತರ 2.40ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪುತ್ತದೆ. ನಾಲ್ಕು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಮರಳಿ ಅದೇ ದಿಕ್ಕಿನಲ್ಲಿ ರೈಲು ಮಂಗಳೂರಿನಿಂದ 2.45ಕ್ಕೆ ಹೊರಡುತ್ತದೆ. ಪಡೀಲ್ (3.10ಗಂಟೆ)‌, ಸುಬ್ರಹ್ಮಣ್ಯ ರಸ್ತೆ (3.50ಗಂಟೆ), ಸಕಲೇಶಪುರ (4.30ಕ್ಕೆ), ಹಾಸನ (7.30ಕ್ಕೆ) ಮೂಲಕ ಬೆಂಗಳೂರಿಗೆ ರಾತ್ರಿ 11 ಗಂಟೆಗೆ ಬಂದು ಸೇರುತ್ತದೆ.

 ಬೆಂಗಳೂರು-ಮಂಗಳೂರು ಸಂಚಾರ ಸುಲಭ 

ಪ್ರಾಯೋಗಿಕ ಹಂತದಲ್ಲಿರುವ ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಕಾರ್ಯಾಚರಣೆ ಸಂಬಂಧ ತಾತ್ಕಲಿಕ ವೇಳಾಪಟ್ಟಿ ಪ್ರಕಟಿಸಿದ್ದು, ಶೀಘ್ರವೇ ಅಂತಿಮ ವೇಳಾಪಟ್ಟಿ ಬಿಡುಗಡೆ ಆಗಲಿದೆ. ಕರ್ನಾಟಕದಲ್ಲಿ ಒಟ್ಟು 12 ವಂದೇ ಭಾರತ್ ರೈಲುಗಳು ಸೇವೆಯಲ್ಲಿವೆ. ದೇಶದ ನಾನಾ ಕಡೆಗಳಲ್ಲಿ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಕರಾವಳಿಗೆ ವಂದೇ ಭಾರತ್ ರೈಲು ಬಿಡುವಂತೆ ಸಾಕಷ್ಟು ಬೇಡಿಕೆ ಕೇಳಿ ಬಂದಿತ್ತು. ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ವಿ.ಸೋಮಣ್ಣ ಅವರು ಆಗಾಗ ಘೋಷಣೆಗ ಮಾಡಿದ್ದರು ಸಹಿತ ಯಾವುದೇ ಅಧಿಕೃತಗೊಂಡಿರಲಿಲ್ಲ. ಸದ್ಯ ಕರಾವಳಿ ಜನರ ಕನಸು ನನಸಾಗುವ ಕಾಲ ಕೂಡಿ ಬಂದಿದ್ದು, ಬೆಂಗಳೂರು-ಮಂಗಳೂರು ರೈಲು ಸಾರಿಗೆ ಮತ್ತಷ್ಟು ಸುಧಾರಣೆ ಆಗಲಿದೆ. ತ್ವರಿತವಾಗಿ ಎರಡು ನಗರಗಳ ಮಧ್ಯ ಸಂಪರ್ಕಿಸಬಹುದಾಗಿದೆ.

ಕಾಮೆಂಟ್ ಬಿಡಿ

Join Us