ಕ್ರೈಂ

ಬೆಂಗಳೂರು ತಂಡದ ವಿಜಯೋತ್ಸವ ಸಂದರ್ಭದಲ್ಲಿ ಮೂಲ್ಕಿ ಮೂಲದ ಯುವತಿ ಸಾವು

ಮೂಲ್ಕಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ ಮೂಲ್ಕಿ ಮೂಲದ ಮಾನಂಪಾಡಿ ಬಳಿಯ ಯುವತಿಯೊಬ್ಬಳು ಪತಿ ಎದುರಿನಲ್ಲಿಯೇ ಮೃತಪಟ್ಟಿದ್ದಾರೆ.

ಆರ್‌ಸಿಬಿ ಗೆಲುವಿನ ನಂತರ, ಬೆಂಗಳೂರಿನ ಅಭಿಮಾನಿಗಳು ತಮ್ಮ ತಂಡವನ್ನು ಸ್ವಾಗತಿಸಲು ಬೆಳಿಗ್ಗೆಯಿಂದಲೇ ಬೀದಿಗಳಲ್ಲಿ ನೆರೆದಿದ್ದರು. ಅಲ್ಲದೆ ವಿಧಾನಸೌಧದಿಂದ ಕ್ರೀಡಾಂಗಣದವರೆಗೆ ತೆರೆದ ಬಸ್‌ನಲ್ಲಿ ವಿಜಯೋತ್ಸವ ಮೆರವಣಿಗೆ ಮಾಡಬೇಕಿತ್ತು. ಆದರೆ ರಸ್ತೆಯಲ್ಲಿ ಸಾವಿರಾರು ಜನಸಂದಣಿ ಇದ್ದ ಕಾರಣ ಅದನ್ನು ರದ್ದುಗೊಳಿಸಬೇಕಾಯಿತು. ವರದಿಗಳ ಪ್ರಕಾರ, ಈ ಮಧ್ಯೆ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನೂಕುನುಗ್ಗಲು ಉಂಟಾಗಿ ಈ ಅವಘಡ ಸಂಭವಿಸಿದೆ.

ಅಕ್ಷತಾ ಪೈ ಮೃತ ಮಹಿಳೆ. ಸಿಎ ಪದವೀಧರೆಯಾಗಿದ್ದ ಅಕ್ಷತಾ ಪೈ ಒಂದೂವರೆ ವರ್ಷದ ಹಿಂದೆ ಉತ್ತರ ಕನ್ನಡ ಸಿದ್ದಾಪುರ ಮೂಲತಃ ಸಾಫ್ಟ್‌ವೇರ್‌ ಇಂಜಿನಿಯರ್‌ ಆಶಯ್‌ ಜೊತೆ ಮದುವೆಯಾಗಿದ್ದು, ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿ ಉದ್ಯೋಗದಲ್ಲಿದ್ದರು. ನಿನ್ನೆ ಮಧ್ಯಾಹ್ನ (ಬುಧವಾರ) ಮನೆಯಿಂದ ಹೊರಟ ಇವರು ಬೆಂಗಳೂರು ತಂಡದ ವಿಜಯೋತ್ಸವ ಸ್ಟೇಡಿಯಂ ಬಳಿ ಬರುತ್ತಿದ್ದಂತೆ ಏಕಾಏಕಿ ನೂಕುನುಗ್ಗಲಿನಿಂದ ಕಾಲ್ತುಳಿತ ಉಂಟಾಗಿ, 11 ಮಂದಿ ಸಾವಿಗೀಡಾಗಿದ್ದು, ಅದರಲ್ಲಿ ಅಕ್ಷತಾ ಪೈ ಕೂಡಾ ಒಬ್ಬರು. 

ಇದೀಗ ತನ್ನ ತಪ್ಪಿನಿಂದ ಎಚ್ಚೆತ್ತುಕೊಂಡಿರುವ ಆರ್​ಸಿಬಿ ಫ್ರಾಂಚೈಸಿ ತನ್ನ ಎಕ್ಸ್ ಖಾತೆಯಲ್ಲಿ, ‘ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿರುವ ಅವಘಡದಿಂದ ತೀವ್ರ ದುಃಖಿತರಾಗಿದ್ದೇವೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯವಾಗಿದೆ. ಈ ಅವಘಡದಿಂದಾಗಿ ಆಗಿರುವ ಜೀವಹಾನಿಗೆ ಆರ್‌ಸಿಬಿ ಶೋಕ ವ್ಯಕ್ತಪಡಿಸುತ್ತದೆ. ಸಂತ್ರಸ್ತ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಪರಿಸ್ಥಿತಿಯ ಬಗ್ಗೆ ತಿಳಿದ ತಕ್ಷಣ, ನಾವು ನಮ್ಮ ಕಾರ್ಯಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಸ್ಥಳೀಯ ಆಡಳಿತದ ಮಾರ್ಗದರ್ಶನ ಮತ್ತು ಸಲಹೆಯನ್ನು ಅನುಸರಿಸಿದ್ದೇವೆ.ದಯವಿಟ್ಟು ಸುರಕ್ಷಿತವಾಗಿರಲು ನಮ್ಮ ಎಲ್ಲಾ ಅಭಿಮಾನಿಗಳ ಬಳಿ ಮನವಿ ಮಾಡುತ್ತೇವೆ ಎಂದು ಬರೆದುಕೊಂಡಿದೆ.

ಚಿನ್ನಸ್ವಾಮಿ ದುರಂತಕ್ಕೆ ಕ್ರೀಡಾಂಗಣದ ಗೇಟ್‌ಗಳನ್ನು ತೆರೆದ ತಕ್ಷಣ ಕಾಲ್ತುಳಿತ ಮತ್ತು ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಆಡಳಿತದ ನಿರ್ಲಕ್ಷ್ಯದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಕ್ರೀಡಾಂಗಣದ ಹೊರಗೆ ತುಂಬಾ ಜನಸಂದಣಿ ಇತ್ತು, ಜನರು ಒಳಗೆ ಹೋಗಲು ಗೋಡೆ ಹಾರಿ ಹೋಗುತ್ತಿದ್ದರು. ಕೆಲವರು ಮರ ಹತ್ತಿ ಒಳಗೆ ಹೋಗಲು ಪ್ರಯತ್ನಿಸಿದರು. ಈ ಇಡೀ ಘಟನೆಗೆ ಯಾರು ಕಾರಣ ಎಂದು ಕಂಡುಹಿಡಿಯಲು ಈಗ ತನಿಖೆ ನಡೆಯುತ್ತಿದೆ. ಆದರೆ ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆ ಸರಿಯಾಗಿದ್ದಿದ್ದರೆ, ಬಹುಶಃ ಈ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕಾಮೆಂಟ್ ಬಿಡಿ

Join Us