ಹಳ್ಳಿ ಹಳ್ಳಿಗಳ ಗೂಡಂಗಡಿಗಳಲ್ಲಿ ಮಾರಲಾಗುತ್ತಿರುವ ಇಂತಹದ್ದೊಂದು ನೋವಿನ ಗುಳಿಗೆ
ಈ ಚಿತ್ರದಲ್ಲಿ ಕಾಣುವ ಆಯುರ್ವೇದಿಕ್ ಎನ್ನಲಾಗುವ ಈ ಗುಳಿಗೆಗಳು ಇತ್ತೀಚಿನ ದಿನಗಳಲ್ಲಿ ಹಳ್ಳಿ ಗಲ್ಲಿಗಳ ಗೂಡಂಗಡಿಗಳಲ್ಲಿ ಲಭ್ಯವಿದೆ. ಇದಕ್ಕೆ ನಿರ್ದಿಷ್ಟವಾದ. ಹೆಸರೂ ಇಲ್ಲ. ಇದರ ತಯಾರಕರು ಯಾರೆಂದೋ, ಈ ಗುಳಿಗೆ ತಯಾರಿಕೆಗೆ ಏನೇನನ್ನೆಲ್ಲಾ ಬಳಸಲಾಗಿದೆಯೆಂದೋ ಯಾವ ವಿವರವೂ ಇದರಲ್ಲಿಲ್ಲ. ಆಯುರ್ವೇದಿಕ ಎಂಬ ಒಂದು ಶೀರ್ಷಿಕೆ ಮತ್ತು ತಪ್ಪು ತಪ್ಪು ಕನ್ನಡದಲ್ಲಿ ಯಾವ್ಯಾವ ನೋವಿಗೆ ಇದನ್ನು ಬಳಸಬಹುದೆಂದು ಬೀಡಿ ಲೇಬಲ್ನಂತಹ ಒಂದು ಲೇಬಲ್ನಲ್ಲಿ ಬರೆದು ಪುಟ್ಟ ಪ್ಲ್ಯಾಸ್ಟಿಕ್ ಕವರ್ವೊಂದರಲ್ಲಿ ಹಾಕಿ ಮಾರಾಟ ಮಾಡುತ್ತಾರೆ. ಮುಡಿಪು ಸುತ್ತ ಮುತ್ತಲ ಕೆಲವು ಔಷಧಾಲಯಗಳಲ್ಲೂ ಇದು ಲಭ್ಯವಿದೆ. ಗ್ರಾಹಕರು ಆಯುರ್ವೇದಿಕ್ ನೋವಿನ ಗುಳಿಗೆ ಕೊಡಿ ಎಂದು ಕೇಳಿದರೆ ಅಂಗಡಿಯವರು, ಔಷಧಾಲಯಗಳವರು ಈ ಗುಳಿಗೆಯ ಒಂದು ಪ್ಯಾಕ್ ಕೊಟ್ಟು nಬಿಡುತ್ತಾರೆ.

ಈ ಗುಳಿಗೆಯ ಮುಖ್ಯ ಗ್ರಾಹಕರು ಕೂಲಿ ಕೆಲಸ ಮತ್ತಿತರ ದೈಹಿಕ ಶ್ರಮದ ಕೆಲಸ ಮಾಡುವವರು, ಕ್ರಿಕೆಟ್ ಆಡುವ ಹುಡುಗರು, ಅರ್ಥ್ರೈಟಿಸ್ನಂತಹ ಖಾಯಿಲೆಯಿಂದ ಬಳಲುತ್ತಿರುವವರು,ರುಮ್ಯಾಟೈಟಿಸ್, uric acid ಹೆಚ್ಚಳದಿಂದಾಗಿ ಗಂಟು ನೋವಿನಿಂದ ಬಳಲುತ್ತಿರುವವರು.ಈ ಗುಳಿಗೆಯನ್ನು ಸೇವಿಸಿದ ಹದಿನೈದು ನಿಮಿಷಗಳೊಳಗಾಗಿ ಎಂತಹದ್ದೇ ನೋವಿದ್ದರೂ ಮಾಯವಾಗಿ ಬಿಡುತ್ತದೆ. ಮತ್ತೆ ಸುಮಾರು ಹನ್ನೆರಡು ಗಂಟೆಗಳವರೆಗೆ ನೋವಿರುವುದಿಲ್ಲ.ಹನ್ನೆರಡು ಗಂಟೆಗಳ ಬಳಿಕ ಪುನಃ ನೋವು ಮರುಕಳಿಸುತ್ತದೆ.ಈ ಗುಳಿಗೆಗೆ ಅತೀ ಹೆಚ್ಚು ಮಾರುಕಟ್ಟೆಯಿರುವುದು ಗ್ರಾಮೀಣ ಪ್ರದೇಶಗಳಲ್ಲಿ.ಅದರಲ್ಲೂ ಅವಿದ್ಯಾವಂತರು ಮತ್ತು ಬಡವರೇ ಹೆಚ್ಚು.
ಅರ್ಥ್ರೈಟಿಸ್, ರುಮ್ಯಾಟೈಟಿಸ್ನಂತಹ ಖಾಯಿಲೆಗಳಿಗೆ ಚಿಕಿತ್ಸೆ ಕೊಡುವ ತಜ್ಞ ವೈದ್ಯರು ಪ್ರತೀ ಎರಡು ತಿಂಗಳಿಗೊಮ್ಮೆ ಕ್ರಿಯಾಟಿನಿನ್ ಎಂಬ ಕಿಡ್ನಿಯ ಕಾರ್ಯಕ್ಷಮತೆಯ ಪರೀಕ್ಷೆ, ಎಸ್.ಜಿ.ಪಿ.ಟಿ. ಎಂಬ ಲಿವರ್ ಕಾರ್ಯಕ್ಷಮತೆ ಅರಿಯುವ ಪರೀಕ್ಷೆ ಮತ್ತು ಪ್ಲೇಟ್ಲೆಟ್ಸ್ ಕೌಂಟ್ ಎಂಬ ಪರೀಕ್ಷೆ ಮಾಡಿಸುತ್ತಾರೆ.ಅದರ ರಿಪೋರ್ಟ್ನ ಹೊರತಾಗಿ ತಜ್ಞ ವೈದ್ಯರೇ ಚಿಕಿತ್ಸೆ ಮುಂದುವರಿಸುವುದಿಲ್ಲ. ಇದರರ್ಥವೇನು ಎಂದು ನಾವು ಸುಲಭವಾಗಿ ಅರ್ಥೈಸಬಹುದು. ಇಂತಹ ಖಾಯಿಲೆಗಳ ಚಿಕಿತ್ಸೆಗಳಿಗೆ ಬಳಸುವ ಔಷಧಿಗಳು ಕಿಡ್ನಿ, ಲಿವರ್ ಮತ್ತು ಪ್ಲೇಟ್ಲೆಟ್ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ.ಆದುದರಿಂದ ಪ್ರತೀ ಬಾರಿಯೂ ಇಂತಹ ಪರೀಕ್ಷೆಗಳನ್ನು ಮಾಡಿಸಿದ ಬಳಿಕವೇ ಔಷಧಿ ಮುಂದುವರೆಸುತ್ತಾರೆ. 

ಇಷ್ಟೆಲ್ಲಾ ಪ್ರತಿಕೂಲ ಪರಿಣಾಮಗಳ ಬಗ್ಗೆ ತಜ್ಞ ವೈದ್ಯರೇ ಹೆದರುತ್ತಾರಾದರೆ, ಯಾವೊಂದು ವೈದ್ಯಕೀಯ ಹಿನ್ನೆಲೆಯೂ ಇಲ್ಲದವರಿಂದ, ಗುಳಿಗೆಯ ಅಮ್ಮ ಅಪ್ಪ ಯಾರೆಂಬ ವಿವರವೂ ಇಲ್ಲದ ಗುಳಿಗೆಯನ್ನು ಕಡ್ಲೆ ಕಾಯಿ ಖರೀದಿಸಿ ತಿಂದಂತೆ ಜನ ನುಂಗುತ್ತಾರೆಂದರೆ ಇದು ಸದ್ಯೋ ಭವಿಷ್ಯದಲ್ಲಿ ರೋಗಿಯ ಮೇಲೆ ಬೀರಬಹುದಾದ ಪ್ರತಿಕೂಲ ಪರಿಣಾಮದ ಬಗ್ಗೆ ಊಹಿಸಿದರೆ ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುವ ನನಗಂತೂ ಎದೆಯಲ್ಲಿ ಚಳಿ ಹಿಡಿಯುತ್ತದೆ.ಈ ಗುಳಿಗೆಯ ಪ್ಲಾಸ್ಟಿಕ್ ಪೊಟ್ಟಣದೊಳಗೆ ಹಾಕಿರುವ ಲೇಬಲ್ ಮೇಲೆ " ಅಪಾಯಕಾರ ಇಲ್ಲ, 100% ಗ್ಯಾರಂಟಿ" ಎಂದು ಹಾಕಿರುವುದನ್ನೇ ಜನ ಮುಗ್ಧವಾಗಿ ನಂಬುತ್ತಿದ್ದಾರೆ ಕೂಡಾ. (ಅದೂ ತೀರಾ ತಪ್ಪಾದ ಕನ್ನಡದಲ್ಲಿ)ಈ ಕುರಿತಂತೆ ಎಲ್ಲಾ ಸ್ಥಳೀಯ ಸರಕಾರಿ ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಕರು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕಾದುದು ಜನಾರೋಗ್ಯದ ದೃಷ್ಟಿಯಿಂದ ಅತೀ ಜರೂರು.
-ಇಸ್ಮತ್ ಪಜೀರ್
ಕಾಮೆಂಟ್ ಬಿಡಿ