ಜಿಲ್ಲಾ ಸುದ್ದಿಗಳು

ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ;ಮಂಗಳೂರು ಆರ್‌ಟಿಒ ಕಚೇರಿಯ ಮೂವರು ಸಿಬ್ಬಂದಿಯನ್ನು ಅಮಾನತು

ಮಂಗಳೂರು: ಕೋಟ್ಯಂತರ ರೂ. ಬೆಲೆಯ ಕಾರಿನ ಮೌಲ್ಯ ಕಡಿಮೆ ಮಾಡಿ ಸರ್ಕಾರಕ್ಕೆ ತೆರಿಗೆ ವಂಚಿಸಿದ್ದ ಆರೋಪದ ಮೇರೆಗೆ ಮಂಗಳೂರು ಸಾರಿಗೆ ಇಲಾಖೆಯ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಬೆಂಗಳೂರಿನ ಸಾರಿಗೆ ಮತ್ತು ಶಿಸ್ತು ಪ್ರಾಧಿಕಾರದ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಮಂಗಳೂರು ಆರ್‌ಟಿಒ ಪ್ರಥಮ ದರ್ಜೆ ಸಹಾಯಕ ನೀಲಪ್ಪ ಎಚ್., ಕಚೇರಿ ಅಧೀಕ್ಷಕಿ ರೇಖಾ ನಾಯಕ್, ಕೇಂದ್ರ ಸ್ಥಾನೀಯ ಸಹಾಯಕಿ ಸರಸ್ವತಿ ಅಮಾನತುಗೊಳಿಸಲಾಗಿದೆ.

ಮಂಗಳೂರು ಆರ್‌ಟಿಒ ಕಚೇರಿಯಲ್ಲಿ 1,96,95,000 ರೂ.ಗಳ ಐಷಾರಾಮಿ ಕಾರನ್ನು 32,15,000 ರೂ. ಮೌಲ್ಯಕ್ಕೆ ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡಿಕೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಬೆಂಗಳೂರಿನ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಕಚೇರಿಯ ಅಪರ ಸಾರಿಗೆ ಆಯುಕ್ತರು ಭೇಟಿ ನೀಡಿ ತನಿಖೆ ನಡೆಸಿದ್ದರು. ಈ ವೇಳೆ ಈ ಮೂವರು ಕರ್ತವ್ಯ ಲೋಪ ಎಸಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಮೂವರ ವಿರುದ್ಧದ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ನೋಂದಣಿಗೆ ಅರ್ಜಿ ಸಲ್ಲಿಕೆ ಮಾಡಿದ ವೇಳೆ ನೀಲಪ್ಪ ಅವರು ನಿಗದಿತ ಮೌಲ್ಯದ ಬದಲು ಕಡಿಮೆ ಮೊತ್ತದ ಮೌಲ್ಯ ನಮೂದಿಸಿದ್ದರು. ಆ ಅರ್ಜಿಯನ್ನು ರೇಖಾ ನಾಯಕ್ ಪರಿಶೀಲಿಸಿದ್ದರು. ಬಳಿಕ ಸರಸ್ವತಿ ಅವರು ಅರ್ಜಿಯನ್ನು ಅನುಮೋದಿಸಿದ ಆರೋಪಕ್ಕೆ ಒಳಗಾಗಿದ್ದಾರೆ. ಮಂಗಳೂರು ಆರ್‌ಟಿಒ ಕಚೇರಿಗೆ ಶಿವಮೊಗ್ಗ ಉಪ ಆಯುಕ್ತರು ಭೇಟಿ ನೀಡಿ ತನಿಖೆ ನಡಸಿದ್ದರು.

ಅಮಾನತುಗೊಂಡ ಈ ಮೂವರಲ್ಲಿ, ನೀಲಪ್ಪ ಕೆ.ಎಚ್ ಅವರನ್ನು ಶಿವಮೊಗ್ಗಕ್ಕೆ, ರೇಖಾ ನಾಯಕ್ ಅವರನ್ನು ಚಿಕ್ಕಮಗಳೂರಿಗೆ ಮತ್ತು ಸರಸ್ವತಿ ಅವರನ್ನು ಬೆಂಗಳೂರು (ಉತ್ತರ) ಕಚೇರಿಗೆ ವರ್ಗಾಯಿಸಲಾಗಿದೆ.

ಕಾಮೆಂಟ್ ಬಿಡಿ

Join Us